ದೌರ್ಜನ್ಯಕ್ಕೊಳಗಾದ ಯುವತಿಯ ಸೇಡು, ಪುನರ್ಜನ್ಮ, ಇದರ ಜೊತೆಗೆ ನಿಧಿಯ ಹುಡುಕಾಟ ಈ ಎಲ್ಲ ಕಂಟೆಂಟ್ ಇಟ್ಟುಕೊಂಡು ನಿರ್ದೇಶಕ ಸಮರ್ಥ ಅವರ ಒಂದೊಳ್ಳೇ ಹಾರರ್ ರಿವೇಂಜ್ ಕಥೆಯನ್ನು ಹೆಣೆದು ತೆರೆಮೇಲೆ ತಂದಿದ್ದಾರೆ, ಆ ಚಿತ್ರದ ಹೆಸರು ರುಧೀರಕಣಿವೆ. ಇದೇ ಶುಕ್ರವಾರ ತೆರೆಕಂಡಿರುವ ಈ ಚಿತ್ರಕ್ಕೆ ಎಲ್ಲಾಕಡೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ, ಚಿತ್ರದ ಆರಂಭದಲ್ಲಿ ಏಳು ಬೆಟ್ಟಗಳಲ್ಲಿ ಒಂದಾರ ರುಧೀರ ಕಣಿವೆಯಲ್ಲಿರುವ ಅಪಾರ ಸಂಪತ್ತಿನ ರಾಶಿಯನ್ನು ಪತ್ತೆ ಹಚ್ಚಿ ಅದನ್ನು ತಮ್ಮದಾಗಿಸಿಕೊಳ್ಳಲು ವ್ಯಕ್ತಿಯೊಬ್ಬ ಪ್ಲಾನ್ ಮಾಡುತ್ತಾನೆ. ಆದರೆ ಆ ನಿಧಿಯನ್ನು ಹುಡುಕಿಕೊಂಡು ಹೋದರ್ಯಾರೂ ಬದುಕಿಬಂದಿಲ್ಲ. ಹಾಗಾಗಿ ಯಾರೂ ಅಲ್ಲಿಗೆ ಹೋಗುವ ದುಸ್ಸಾಹಸಕ್ಕೆ ಮುಂದಾಗುವುದಿಲ್ಲ, ಆದರೆ ದುಡ್ಡಿನ ಅನಿವಾರ್ಯತೆ ಇರುವ ಒಂದಷ್ಟು ಜನ ಮಾತ್ರವೇ ಮುಂದೆ ಬರುತ್ತಾರೆ, ಅದರಲ್ಲಿ ಚಿತ್ರದ ನಾಯಕ ಕಾರ್ತಿಕ್ ತಾನು ಮನಸಾರೆ ಪ್ರೀತಿಸಿದ ಹುಡುಗಿಯನ್ನು ಉಳಿಸಿಕೊಳ್ಳಲು ಹಣದ ಅವಶ್ಯಕತೆ ಇರುತ್ತದೆ. ಹಾಗಾಗಿ ರುಧೀರ ಕಣಿವೆಯ ನಿಧಿಯನ್ನು ಪತ್ತೆಹಚ್ಚಿ ತರಲು ಒಪ್ಪಿಕೊಳ್ಳುತ್ತಾನೆ. ಅದೇರೀತಿ ಮುಂಬೈ ಹಾಗೂ ಪಾಕ್ನಿಂದಲೂ ಒಂದಷ್ಟು ಜನರ ತಂಡ ಅದೇ ನಿಧಿಯನ್ನು ಹುಡುಕಿಕೊಂಡು ಬರುತ್ತದೆ. ಮುಂದೆ ನಡೆಯುವುದೇ ಹಾರರ್ ರಿವೇಂಜ್ಸ್ಟೋರಿ.
ಚಿತ್ರದ ಕಥೆ ಆರಂಭವಾಗುವುದೇ ಮೂರು ಪ್ರಮುಖ ಪಾತ್ರಗಳು ಮರುಜನ್ಮ ತಾಳುವುದರೊಂದಿಗೆ ಒಬ್ಬರು ಬೆಂಗಳೂರಿನಲ್ಲಿ, ಮತ್ತೊಬ್ಬರು ಮುಂಬೈಯಲ್ಲಿ ಮಗದೊಬ್ಬರು ಪಾಕಿಸ್ತಾನದ ಕರಾಚಿಯಲ್ಲಿ ಜನಿಸುತ್ತಾರೆ. ಈ ಮೂವರು ತಮ್ಮ ಹಿಂದಿನ ಜನ್ಮದಲ್ಲಿ ಕರ್ನಾಟಕದ ಹಳ್ಳಿಯೊಂದರಲ್ಲಿ ಗೆಳೆಯರಾಗಿರುತ್ತಾರೆ. ಅವರಲ್ಲಿ ನಾಯಕ ಅರ್ಜುನ್(ಕಾರ್ತೀಕ್) ಅದೇ ಹಳ್ಳಿಯ ಸಿರಿವಂತ ಮನೆಯ ಹುಡುಗಿ ನಕ್ಷತ್ರ(ದಿಶಾ ಪೂವಯ್ಯ)ಳನ್ನು ಪ್ರೀತಿಸುತ್ತಿರುತ್ತಾನೆ. ನಾಯಕಿ ತನ್ನ ತಂದೆಯ ವಿರೋಧದ ನಡುವೆಯೂ ಮನೆಬಿಟ್ಟು ಬಂದು ನಾಯಕನನ್ನು ಮದುವೆಯಾಗಲು ಅಣಿಯಾಗುತ್ತಾಳೆ, ಮದುವೆಗೆ ತಾಳಿ, ಹೂ ಇತರೆ ಸಾಮಗ್ರಿಗಳನ್ನು ತರಲು ಊರಿಗೆ ಹೋಗುವಾಗ ನಾಯಕ ತನ್ನ ಗೆಳೆಯರಿಗೆ ನಕ್ಷತ್ರಳನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿ ಹೋಗುತ್ತಾನೆ. ಆತ ವಾಪಸ್ ಬರುವುದರೊಳಗೆ ದರ್ಘಟನೆಯೊಂದು ನಡೆದು ನಾಯಕಿ ಮರಣ ಹೊಂದಿರುತ್ತಾಳೆ, ನಂತರ ನಡೆಯುವುದೇ ಮರುಜನ್ಮದ ಕಥೆ. ನಾಯಕ ಹಾಗೂ ಪಾಕ್ನ ಕರಾಚಿ ಹಾಗೂ ಮುಂಬೈನಿಂದ ಬರುವ ವ್ಯಕ್ತಿಗಳು ತಮ್ಮ ತಂಡದ ಜೊತೆ ರುಧೀರ ಕಣಿವೆಗೆ ಬರುತ್ತಾರೆ. ಆದರೆ ಇವರ ಜೊತೆಗಿದ್ದವರೆಲ್ಲ ಮರೆಯಾಗಿ ಕೊನೆಗೆ ನಾಯಕ ಹಾಗೂ ಮತ್ತಿಬ್ಬರು ಮಾತ್ರವೇ ಉಳಿದುಕೊಳ್ಳುತ್ತಾರೆ. ನಿಧಿಯ ಜಾಗವನ್ನು ಕೊನೆಗೂ ಪತ್ತೆ ಹಚ್ಚಿದ ಆ ಮೂವರೂ ಅದನ್ನು ಹೊರತೆಗೆಯಲು ಗುಂಡಿ ತೋಡುತ್ತಾರೆ. ಆಗ ಬಂಧನದಲ್ಲಿದ್ದ ಅತೃಪ್ತ ಆತ್ಮವೊಂದು ಸ್ವತಂತ್ರವಾಗಿ ಇವರಮೇಲೆ ಅಟ್ಯಾಕ್ ಮಾಡುತ್ತದೆ,
ಈ ಮೂವರಿಗೂ ಆ ನೊಂದ ಹೆಣ್ಣಿನ ಪ್ರೇತಾತ್ಮಕ್ಕೂ ಇರುವ ಸಂಬಂಧ ಏನು ಎನ್ನುವದೇ ಚಿತ್ರದ ಕ್ಲೈಮ್ಯಾಕ್ಸ್. ಆಗಲೇ ಅವರ ಹಿಂದಿನ ಜನ್ಮದ ಕಥೆ ತೆರೆದುಕೊಳ್ಳುತ್ತದೆ. ನಿರ್ದೇಶಕರು ಚಿತ್ರವನ್ನು ನೇರವಾಗಿ ಹೇಳಿಕೊಂಡು ಹೋಗದೆ, ಫ್ಲಾಷ್ಬ್ಯಾಕ್ನಲ್ಲಿ ಹಿಂದಿನ ಜನ್ಮದ ಕಥೆ ತೆರೆದಿಟ್ಟಿದ್ದಾರೆ. ಚಿತ್ರಕಥೆಯಲ್ಲಿ ಒಂದು ಹೊಸತನವಿದೆ, ಚಿತ್ರದ ಆರಂಭದಲ್ಲೇ ಕುತೂಹಲ ಹುಟ್ಟಿಸುವ ನಿರ್ದೇಶಕರು ಅದಕ್ಕೆ ಉತ್ತರವನ್ನು ಕ್ಲೈಮ್ಯಾಕ್ಸ್ ವರೆಗೆ ಕಾಯ್ದುಕೊಂಡು ಹೋಗಿದ್ದಾರೆ. ನಟಿ ದಿಶಾ ಪೂವಯ್ಯ ತನ್ನ ಎರಡು ಶೇಡ್ ಪಾತ್ರಗಳಿಗೂ ನ್ಯಾಯ ಒದಗಿಸಿದ್ದಾರೆ. ಶ್ರೀಲಕ್ಷ್ಮಿ ನರಸಿಂಹ ಮೂವೀಸ್ ಬ್ಯಾನರ್ ಅಡಿಯಲ್ಲಿ ವಿಜಯಕುಮಾರ್ ಅವರು ಮೊದಲಬಾರಿಗೆ ನಿರ್ಮಿಸಿರುವ ಈ ಚಿತ್ರ ಕನ್ನಡ ಮಾತ್ರವಲ್ಲದೆ ತಮಿಳು, ತೆಲಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿದೆ. ಎ.ಟಿ.ರವೀಶ್ ಅವರ ಹಿನ್ನೆಲೆ ಸಂಗೀತ ಹಾಗೂ ಹಾಡುಗಳು ಗಮನ ಸೆಳೆಯುತ್ತವೆ.